ಎಂ.ಆರ್.ರಂಗಸ್ವಾಮಿ, ಮೃದಂಗವನ್ನು ತಯಾರಿಸಿ, ಅದನ್ನು ಅತ್ಯಂತ ಲಯಬದ್ಧವಾಗಿ ನುಡಿಸುವ ನೈಪುಣ್ಯತೆಯನ್ನು ಪಡೆದಿರುವ ವಿಶೇಷ ವ್ಯಕ್ತಿ. 'ಎಂ.ಆರ್.ರಂಗಸ್ವಾಮಿ', ಸಂಗೀತ ಕಚೇರಿಗಳಲ್ಲಿ ಪಕ್ಕವಾದಕರಾಗಿ ಕೆಲಸಮಾಡುತ್ತಿದ್ದಾರೆ. ಆದರೆ ಭರತನಾಟ್ಯಕ್ಕೆ ಸಂಗತಿ ಕೊಡುವ ನಿಟ್ಟಿನಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. === ಜನನ, ಮನೆಯ ಪರಿಸರ === ಚಾಮರಾಜನಗರದ ಹಳ್ಳಿಯೊಂದರಲ್ಲಿ ೧೯೩೧ರಲ್ಲಿ ಜನಿಸಿದ ಲಯವಾದ್ಯ ವಂಶಪಾರಂಪರ್ಯವಾಗಿ ಬಂದಿದೆ. ತಂದೆ ರಂಗಯ್ಯ, ತಾಳವಾದ್ಯಗಳ ತಯಾರಿಕೆಯಲ್ಲಿ ನಿಪುಣರು. ತಾವೇ ತಬಲ ಮೃದಂಗ ನುಡಿಸುತ್ತಿದ್ದರು. ಆದರೆ ರಂಗಸ್ವಾಮಿಯವರ ಶಿಕ್ಷಣ ಅವರ ದೊಡ್ಡಪ್ಪನವರಲ್ಲಿ ಆರಂಭವಾಯಿತು. 'ಸೀನಪ್ಪ ಸುಬ್ಬು,' ಇವರ ನಂತರದ ಗುರುಗಳು. ತಮ್ಮ ೧೦ನೇಯ ವಯಸ್ಸಿನಿಂದಲೆ ಕಚೇರಿ ಜೀವನಕ್ಕೆ ಧುಮುಕಿದ ರಂಗಸ್ವಾಮಿ, ಶಾಸ್ತ್ರೀಯ ಸಂಗೀತವಲ್ಲದೇ ಲಘು ಸಂಗೀತ, ಚಿತ್ರ ಸಂಗೀತಗಳಿಗೂ ತಬಲಾ-ಮೃದಂಗ ನುಡಿಸುತ್ತಾ ಬಂದಿದ್ದಾರೆ. ಹೆಚ್ಚಾಗಿ ಹಚ್ಚಿಕೊಂಡಿರುವುದು ನೃತ್ಯ ಕ್ಷೇತ್ರವನ್ನು; ರಾಜ್ಯದ ಭರತನಾಟ್ಯ ವಲಯದಲ್ಲಿ ಅವರದು ವಿಶಿಷ್ಠ ಸ್ಥಾನ. 'ಸಾದಿರ್ ಕಾರ್ಯಕ್ರಮ'ಗಳಲ್ಲದೇ, ನೃತ್ಯ ಶಾಲೆಗಳು ನಿರ್ಮಿಸುವ ನೃತ್ಯ-ನಾಟಕಗಳಿಗೂ ತಮ್ಮ ಸುಲಲಿತ ವಾದನದಿಂದ ಅತ್ಯಂತ ಜನಪ್ರಿಯರಾಗಿದ್ದಾರೆ. === ದೇಶವಿದೇಶಗಳಲ್ಲಿ === ರಂಗಸ್ವಾಮಿ, ಭಾರತದ ವಿವಿಧ ಭಾಗಗಳಲ್ಲದೇ ಯೂರೋಪಿನ, ಅರೇಬಿಯಾದ ಅನೇಕ ನಗರಗಳಲ್ಲೂ ಸಂಚರಿಸಿದ್ದಾರೆ. ವಿಶ್ವವಿದ್ಯಾಲಯದ ಸಂಗೀತ-ನಾಟಕ-ನೃತ್ಯ ವಿಭಾಗದಲ್ಲಿ ಕೆಲ ಕಾಲ 'ಮೃದಂಗ ಉಪನ್ಯಾಸಕ'ರಾಗಿದ್ದರು. ಕರ್ನಾಟಕ ಅಕಾಡೆಮಿ ಏರ್ಪಡಿಸಿದ್ದ “ನಾಟ್ಯಕ್ಕೆ ಮೃದಂಗ” ಕಾರ್ಯಾಗಾರದ ಮುಖ್ಯಸ್ಥರಾಗಿ ಹಲವಾರು ಯುವಕಲಾವಿದರಿಗೆ ಮಾರ್ಗದರ್ಶನವಿತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಮೃದಂಗ ತಯಾರಿಕೆಯ, ರಿಪೇರಿಯ ಮಳಿಗೆ ಹೊಂದಿರುವ ರಂಗಸ್ವಾಮಿಯವರಿಗೆ ಅನೇಕ ಸನ್ಮಾನಗಳು ಬಂದಿವೆ. === ಗೌರವ ಪ್ರಶಸ್ತಿಗಳು === ಕರ್ನಾಟಕ ಅಕಾಡೆಮಿಯು ತನ್ನ ೧೯೯೨-೯೩ರ ಪ್ರಶಸ್ತಿ ಹಾಗು “ಕರ್ನಾಟಕ ಕಲಾ ತಿಲಕ” ಎಂಬ ಬಿರುದನ್ನು ನೀಡಿ ಗೌರವಿಸಿದೆ. == ಉಲ್ಲೇಖಗಳು ==